ಎಮಿತ್ತಚ್ಚನ್: 17ನೆಯ ಶತಮಾನ. ಮಲೆಯಾಳಂ ಭಾಷೆಯಲ್ಲಿ ಇಂದಿಗೂ ಬಹು ಜನಪ್ರಿಯವಾಗಿರುವ ರಾಮಾಯಣ ಮಹಾಭಾರತಗಳನ್ನು ಬರೆದಿರುವ ಪ್ರಸಿದ್ಧ ಕವಿ. ತುಂಜತ್ತು ಎಮಿತ್ತಚ್ಚನ್ ಈತನ ಪುರ್ವ ನಾಮ. ಈತನ ಶೈಲಿಯಲ್ಲಿ ಒಂದು ರೀತಿಯ ಸುವರ್ಣ ಮಾಧ್ಯಮ ಕಾಣುತ್ತದೆ. ತನ್ನ ಹಿಂದೆ, ಎಂದರೆ 16ನೆಯ ಶತಮಾನ ದಲ್ಲಿ, ಕವಿಗಳು ತೀರ ಮಲೆಯಾಳದ ಸೊಗಡನ್ನುಳ್ಳ ಜಾನಪದ ಗೀತ ಮಾದರಿಗಳಲ್ಲಿ ಬರೆಯುತ್ತಿದ್ದರು. ಇಲ್ಲವೆ ಸಂಸ್ಕೃತ ಪದ ವೃತ್ತ ಭೂಯಿಷ್ಠವಾದ ಮಣಿಪ್ರವಾಳ ಶೈಲಿಯಲ್ಲಿ ಬರೆಯುತ್ತಿದ್ದರು. ಆದರೆ ಎಮಿತ್ತಚ್ಚನ್ ಮಲೆಯಾಳ ಮತ್ತು ಸಂಸ್ಕೃತಗಳ ಹಾಳತವಾದ ಮಿಶ್ರಣವನ್ನು ದ್ರಾವಿಡ ಧಾಟಿಗಳಿಗೆ ಹೊಂದಿಸುವ ಪ್ರಯೋಗವನ್ನು ಯಶಸ್ವಿಯಾಗಿ ಮಾಡಿದ್ದಾನೆ. ಕೇರಳದ ಜಾನಪದ ಗೀತೆಗಳಾದ ವಡಕ್ಕನ್ ಪಾಟ್ಟುಗಳು (ಬಡಗಣ ಗೀತೆಗಳು) ಈತನ ಮೇಲೆ ಸಾಕಷ್ಟು ಪ್ರಭಾವ ಬೀರಿವೆ.

ಈತನ ರಾಮಚರಿತಂ ಕಾವ್ಯ ಭಕ್ತಿಸಾಹಿತ್ಯದ ಮೇರುಕೃತಿಯಾಗಿಯೇ ಇಂದಿಗೂ ಉಳಿದಿದೆ. ತನ್ನ ಹೃದಯದಲ್ಲಿ ಉಕ್ಕುತ್ತಿದ್ದ ಭಕ್ತಿಭಾವವನ್ನು ಪ್ರಕಟಪಡಿಸಲು ಅದಕ್ಕೆ ಅನುಯೋಜ್ಯವಾದ ಇತಿವೃತ್ತಗಳನ್ನು ಆಧ್ಯಾತ್ಮ ರಾಮಾಯಣದಲ್ಲೂ ಮಹಾಭಾರತದಲ್ಲೂ ಕಂಡುಕೊಂಡು, ಮೂಲಗ್ರಂಥಗಳನ್ನು ಅವಲಂಬಿಸಿ ಸ್ವಕೀಯವೂ ಸ್ವತಂತ್ರ್ಯವೂ ಆದ ರೀತಿಯಲ್ಲಿ ನೂತನ ಗ್ರಂಥಗಳನ್ನು ಈ ಕವಿ ರಚಿಸಿದ್ದಾನೆ. ಭಕ್ತಿದ್ಯೋತಕವಾದ ಭಾಗಗಳಂತೂ ಗಾನಯೋಗ್ಯವಾಗಿದ್ದು ಮೈಮರೆಸುವಂತಿವೆ. ಭಕ್ತಿಪ್ರಸ್ಥಾನ, ಕಿಳಿಪಾಟ್ಟು ಪ್ರಸ್ಥಾನಗಳನ್ನು ಪುನರುದ್ಧರಿಸಿದವನೆಂದು ಸಾಹಿತ್ಯ ಚರಿತ್ರೆಯಲ್ಲಿ ಈತ ಖ್ಯಾತನಾಗಿದ್ದಾನೆ. ಭಕ್ತಿಸಾಹಿತ್ಯದಲ್ಲಿ ಈತನಿಗೆ ತುಳಸೀದಾಸ, ಜಯದೇವ ಮೊದಲಾದ ಮಹಾಕವಿಗಳೊಡನೆ ಸಮಾನಪಟ್ಟವಿದೆಯೆಂದಲ್ಲಿ ಅತಿಶಯೋಕ್ತಿಯಾಗದು.

ರಾಮಾಯಣ, ಮಹಾಭಾರತಗಳಲ್ಲದೆ ಇನ್ನೂ ಕೆಲವು ಕೃತಿಗಳನ್ನು ಈತ ಬರೆದನೆನ್ನಲಾಗಿದೆ. ಅವುಗಳ ಪೈಕಿ ಮಲೆಯಾಳ ಭಾಗವತದ ಮೊದಲಿನ ಒಂಬತ್ತು ಸ್ಕಂಧಗಳು, ಉತ್ತರ ರಾಮಾಯಣ, ಹರಿನಾಮ ಕೀರ್ತನಂ, ಚಿಂತಾರತ್ನಂ-ಈ ಕೃತಿಗಳನ್ನು ಅವನವೆಂದು ಹೇಳಬಹುದು. ಆದರೆ ಇವಾವುವೂ ರಾಮಯಣ, ಮಹಾಭಾರತಗಳ ಮಟ್ಟಕ್ಕೆ ಮುಟ್ಟುವಂಥವಲ್ಲ. ಭಾಗವತಂ ಕಿಳಿಪಾಟ್ಟು ರಾಮಾಯಣಂ ಇರುಪತ್ತಿನಾಲು ವೃತ್ತಂ, ದೇವೀಮಾಹಾತ್ಮ್ಯಂ ಮುಂತಾದವನ್ನು ಈತನೇ ಬರೆದನೆಂಬ ವಿಷಯದಲ್ಲಿ ಅಭಿಪ್ರಾಯಭೇದವಿದೆ. ಆಧ್ಯಾತ್ಮ ರಾಮಾಯಣದಲ್ಲಿ ತತ್ತ್ವೋಪದೇಶಕ್ಕೂ ಭಾಗವತದಲ್ಲಿ ಕೃಷ್ಣಪಾರಮ್ಯ ಸ್ಥಾಪನೆಗೂ ಕವಿ ಆದ್ಯಗಮನವಿತ್ತಿದ್ದಾನೆ.

ಮಲೆಯಾಳಂ ಭಾಷೆಗೆ ಒಂದು ಲಿಪಿಸಮುಚ್ಚಯವನ್ನು ಒದಗಿಸಿದ ಕೀರ್ತಿಯನ್ನೂ ಎಮಿತ್ತಚ್ಚನಿಗೆ ಕೆಲವರು ವಿದ್ವಾಂಸರು ಆರೋಪಿಸಿದ್ದಾರೆ. ಈತನ ಕೃತಿಗಳ ಮೂಲಕ ಮಲೆಯಾಳಂ ಭಾಷೆಯ ಸಾಹಿತ್ಯಕ್ಕೆ ಉಂಟಾದ ಅಭಿವೃದ್ಧಿಯನ್ನು ಅನುಲಕ್ಷಿಸಿ ಇಂಥ ವಾದ ಹುಟ್ಟಿಕೊಂಡಿದೆಯೆಂದು ಹೇಳಬಹುದು, ಅಷ್ಟೆ.	(ಕೆ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ